ಮನಸ್ಸಿಗೆ ಮುದನೀಡುವ ತಾಳಮದ್ದಲೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಭಾನುವಾರ, ಸೆಪ್ಟೆ೦ಬರ್ 22 , 2013
|
ತಾಳಮದ್ದಲೆ ಮನಸ್ಸಿಗೆ ಮುದ ನೀಡುವಷ್ಟೇ ಬೌದ್ಧಿಕ ಕಸರತ್ತು ಪ್ರದರ್ಶಿಸುವ ಕಲೆ. ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ತಾಳಮದ್ದಲೆಗೆ ವಿಶೇಷ ಪ್ರಾಶಸ್ತ್ಯವಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ ಸೇರಿದಂತೆ ಬಹುತೇಕ ತಾಲೂಕುಗಳಲ್ಲಿ ತಾಳಮದ್ದಲೆ ಕಾರ್ಯಕ್ರಮ ಸಾಂಸ್ಕೃತಿಕ ವೈಶಿಷ್ಟ್ಯತೆಗಳಲ್ಲೊಂದಾಗಿದೆ. ಸಾರ್ವತ್ರಿಕವಾದ ತಾಳಮದ್ದಲೆ ಕಾರ್ಯಕ್ರಮವೂ ನಡೆಯುತ್ತದೆ. ಅದೇ ರೀತಿ ಅನೇಕರು ತಮ್ಮ ಸ್ವಂತ ಖರ್ಚಿನಲ್ಲಿ ಮನೆಯಂಗಳದಲ್ಲೇ ಬೇರೆ ಬೇರೆ ಸಂದರ್ಭಗಳಲ್ಲಿ ತಾಳಮದ್ದಲೆ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ. ಎರಡು ದಶಕಗಳಿಗೂ ಪೂರ್ವ ಗ್ರಾಮೀಣ ಪ್ರದೇಶದ ಮನರಂಜನೆಯ ಕೇಂದ್ರಬಿಂದುವೇ ತಾಳಮದ್ದಲೆಯಾಗಿತ್ತು. ಆಧುನಿಕ ತಂತ್ರಜ್ಞಾನ ಸ್ಪರ್ಧೆ ನಡುವೆಯೂ ತಾಳಮದ್ದಲೆ ಕಲಾಪ್ರಿಯರ ಮನಸ್ಸಿನಲ್ಲಿ ಸ್ಥಿರವಾಗುಳಿದಿದೆ.
ಕಣ್ಣಿಗೆ ಕಟ್ಟುವ ತಾಳಮದ್ದಲೆ : ತಾಳಮದ್ದಲೆಯೆಂದರೆ ಪೌರಾಣಿಕ ಚರಿತ್ರೆಯ ಆಖ್ಯಾನಗಳನ್ನು ಕುಳಿತ ಬೈಠಕ್ನಲ್ಲಿ ಮನಮುಟ್ಟುವಂತೆ ವಿವರಿಸುವುದಾಗಿದೆ. ವೇಷಗಳಿಲ್ಲ, ಬಣ್ಣಗಳಿಲ್ಲ. ಆದರೂ ಪಾತ್ರಧಾರಿಗಳಿರುತ್ತಾರೆ. ರಾಮಾಯಣ, ಮಹಾಭಾರತಗಳನ್ನೊಳಗೊಂಡಂತೆ ಭಸ್ಮಾಸುರ ಮೋಹಿನಿ ಮುಂತಾದ ಕಥಾನಕಗಳನ್ನು ಕಣ್ಣಿಗೆ ಕಟ್ಟಿದಂತೆ ವರ್ಣಿಸುವುದೇ ತಾಳಮದ್ದಲೆಯ ಹೂರಣವಾಗಿದೆ. ಸೇರಿಗೆ ಸವ್ವಾಸೇರು ಎನ್ನುವಂತೆ ದೈವಿಪಾತ್ರ, ಅಸುರರ ಪಾತ್ರಗಳ ನಡುವಿನ ಮಾತಿನ ಸಂಘರ್ಷ ಪ್ರೇಕ್ಷಕರಿಗೆ ರಸದೌತಣ ಬಡಿಸುತ್ತದೆ. ಪ್ರತಿಯೊಂದು ಪಾತ್ರಕ್ಕೂ ಪಾತ್ರಧಾರಿ ಜೀವಂತಿಕೆ ತುಂಬುವ ಪ್ರಯತ್ನ ಮಾಡುತ್ತಾರೆ. ಹಾಗಾಗಿಯೇ ತಾಳಮದ್ದಲೆ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತಾಳಮದ್ದಲೆ ಕಾಲಮಿತಿ ಪ್ರಯೋಗಕ್ಕೊಳಪಟ್ಟಿದೆ. 10-15 ವರ್ಷಗಳ ಹಿಂದಿನವರೆಗೂ ರಾತ್ರಿಯಿಂದ ಬೆಳಗಿನವರೆಗೂ ಒಂದು ಅಥವಾ ಎರಡು ಪ್ರಸಂಗಗಳನ್ನು ಏರ್ಪಡಿಸಲಾಗುತ್ತಿತ್ತು.
ಸಿದ್ದಾಪುರ ತಾಲೂಕಿನ ಹೇರೂರಿನ ಗಣೇಶ ಹೆಗಡೆಯವರ ಮನೆಯಲ್ಲಿ ಅರ್ಧ ಶತಮಾನಗಳಿಂದ ತಾಳಮದ್ದಲೆ ಆಚರಣೆ ನಡೆಯುತ್ತಿದ್ದು, ಇಂದಿಗೂ ಗಣೇಶ ಹೆಗಡೆಯವರ ಮನೆಯ ತಾಳಮದ್ದಲೆಯೆಂದರೆ ಸುತ್ತಲಿನ ಹತ್ತಾರು ಊರುಗಳ ಜನ ಒಟ್ಟಾಗುತ್ತಾರೆ. ಪ್ರತಿವರ್ಷ ಗಣೇಶ ಚತುರ್ಥಿ ಸಂದರ್ಭ ಅಹೋರಾತ್ರಿ ತಾಳಮದ್ದಲೆ ಕಾರ್ಯಕ್ರಮ ಜರುಗುತ್ತದೆ. ಗಣೇಶ ಹೆಗಡೆಯವರ ಮನೆಯ ತಾಳಮದ್ದಲೆಯೆಂದರೆ ಸ್ಥಳೀಯರಷ್ಟೇ ಅಲ್ಲ ಇತರ ಊರುಗಳ ಜನರೂ ಆಗಮಿಸುತ್ತಾರೆ. ಅದೇ ರೀತಿ ಖ್ಯಾತ ಅರ್ಥಧಾರಿಗಳು ಆಗಮಿಸಿ ಶ್ರೋತೃಗಳ ಮನಗೆಲ್ಲುತ್ತಾರೆ.
|
ಉಮಾಕಾಂತ ಭಟ್ಟ ಕೆರೇಕೈ
|
ಆಕರ್ಷಣೆ ಕೇಂದ್ರಬಿಂದು : 10 ವರ್ಷಗಳಿಂದ ಗಣೇಶ ಹೆಗಡೆಯವರ ಮನೆಯಲ್ಲಿ ತಾಳಮದ್ದಲೆಯ ಜಾಗರಣೆ ಆಚರಣೆ ಕಾಲಮಿತಿಗೊಳಪಟ್ಟು ಸನಿಹದಲ್ಲಿರುವ ಸಿದ್ಧಿವಿನಾಯಕ ದೇವಾಲಯದ ಆವರಣಕ್ಕೆ ಸ್ಥಳಾಂತರಗೊಂಡಿತು. ಕಲಾರಾಧನೆಯು ಜೀವನದ ಅವಿಭಾಜ್ಯ ಅಂಗ ಎಂದೇ ತಿಳಿದುಕೊಂಡಿರುವ ಗಣೇಶ ಹೆಗಡೆಯವರ ಕೊಡುಗೆ ಅನನ್ಯ. ಇವರ ನೇತೃತ್ವದಲ್ಲಿ 40 ವರ್ಷಗಳಿಂದ ನಡೆದ ತಾಳಮದ್ದಲೆಯಲ್ಲಿ ನಿರಂತರವಾಗಿ ಭಾಗವಹಿಸಿದವರು ರಾಜ್ಯಪ್ರಶಸ್ತಿ ಪುರಸ್ಕೃತ ನೆಬ್ಬೂರ ನಾರಾಯಣ ಭಾಗವತರು. ನೆಬ್ಬೂರರ ಭಾಗವತಿಕೆ ಇದೆಯೆಂದರೆ ಪ್ರೇಕ್ಷಕರು ತಂಡೋಪತಂಡವಾಗಿ ಆಗಮಿಸುತ್ತಾರೆ. ಅಂತಹ ಭಾಗವತರ ಹಿರಿತನದಲ್ಲಿ ಸೆ. 15ರ ಸಂಜೆ ರಾವಣವಧೆ ಪ್ರಸಂಗ ನಡೆಸಲಾಯಿತು. ತಾಳಮದ್ದಲೆ ಪ್ರಸಂಗ ಗಣೇಶ ಹೆಗಡೆಯವರ ಮನೆಯಂಗಳದಲ್ಲಿ ಅಹೋರಾತ್ರಿ ನಡೆಯಿತು.
ಸ್ಥಳೀಯ ಜನರ ಭಾವನೆಗೆ ಸ್ಪಂದಿಸಿ 1994ರಿಂದ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ತಾಳಮದ್ದಲೆ ಏರ್ಪಡಿಸುತ್ತ ಬರಲಾಗಿದೆ.
ಶಂಭು ಹೆಗಡೆ ಕೆರೆಮನೆ, ವೆಂಕಟಾಚಲ ಭಟ್ಟ, ಲಕ್ಷ್ಮೀನಾರಾಯಣ ಹೆಗಡೆ ಹಸರಗೋಡ, ವಿ.ಆರ್. ಹೆಗಡೆ, ಕೇಶವ ಭಟ್ಟ, ವಾಸುದೇವ ರಂಗ ಭಟ್ಟ, ಉಮಾಕಾಂತ ಭಟ್ಟ ಕೆರೇಕೈ, ಗಣಪತಿ ಭಟ್ಟ ಸಂಕದಗುಂಡಿ ಈ ಮುಂತಾದ ಹಿರಿ ತಲೆಮಾರಿನ ಮತ್ತು ಪ್ರಸ್ತುತ ಜನಮನಗೆದ್ದ ಕಲಾವಿದರು ಅರ್ಥಧಾರಿಗಳಾಗಿ ಜನಮನಸೂರೆಗೊಂಡಿದ್ದಾರೆ.
ಈ ವರ್ಷದ ಕಲಾಸೇವೆಯಲ್ಲಿ ಸ್ಥಳೀಯ, ಹಿರಿಯ ಕಲಾವಿದರಾದ ಭೀಮನಳ್ಳಿಯ ಗಣಪತಿ ನಾರಾಯಣ ಹೆಗಡೆ, ಉಂಬಳಮನೆಯ ಪರಮೇಶ್ವರ ದೇವಪ್ಪ ಹೆಗಡೆಯವರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಹಬ್ಬದ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾವಣ ವಧೆ ಪ್ರಸಂಗ ಜನಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಆಗಮಿಸಿದ್ದ ಕಲಾವಿದರು ಮತ್ತು ಕಲಾಪೋಷಕರು ಗಣೇಶ ಹೆಗಡೆಯವರ ಕಲಾರಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಕೃಪೆ : http://www.kannadaprabha.com
|
|
|